ಯಕ್ಷಗಾನಕ್ಕೆ ಮುಳುವಾಗುತ್ತಿರುವ ಜನಪ್ರಿಯತೆ : ಕೆರೆಮನೆ ಶಿವಾನಂದ ಹೆಗಡೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಒಕ್ಟೋಬರ್ 7 , 2013
|
ಒಕ್ಟೋಬರ್ 7 , 2013
|
ಯಕ್ಷಗಾನಕ್ಕೆ ಮುಳುವಾಗುತ್ತಿರುವ ಜನಪ್ರಿಯತೆ : ಕೆರೆಮನೆ ಶಿವಾನಂದ ಹೆಗಡೆ
ಸಾಗರ :
ಜಾನಪದೀಯ ಕಲೆಯಾಗಿ ಯಕ್ಷಗಾನವನ್ನು ಒಂದು ಚೌಕಟ್ಟಿನಲ್ಲಿ ಅಳವಡಿಸಿಲ್ಲದಿರುವುದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಲು ದೊಡ್ಡ ಸಮಸ್ಯೆಯಾಗಿದೆ. ಜನಪ್ರಿಯತೆಯ ಅಬ್ಬರ ಯಕ್ಷಗಾನದ ವಿನಾಶಕ್ಕೆ ಕಾರಣವಾಗುತ್ತಿರುವುದು ವಿಪರ್ಯಾಸ ಎಂದು ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಹೇಳಿದರು.
ನಗರದ ಕಾಗೋಡು ರಂಗಮಂದಿರದಲ್ಲಿ ಭಾನುವಾರ ಪ್ರಜ್ಞಾರಂಗ ತಂಡ ಹಾಗೂ ಯಕ್ಷಮಿತ್ರರು ಹಮ್ಮಿಕೊಂಡಿದ್ದ ಯಕ್ಷೊàತ್ಸವ ಸಂಭ್ರಮ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಿದ್ದ 'ಯಕ್ಷಗಾನದ ಪ್ರಸ್ತುತತೆ' ಕುರಿತ ವಿಚಾರ ಸಂಕಿರಣವನ್ನು ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನಕ್ಕೆ ನಿರ್ದೇಶಕನಿಲ್ಲ. ಕಲಾವಿದನ ಪ್ರದರ್ಶನದ ಬಗ್ಗೆ ಅವನಿಗೆ ವಿಮರ್ಶೆ ಸಿಗುವಂತಹ ಸಂವಹನ ವ್ಯವಸ್ಥೆಯಿಲ್ಲ. ಇದರ ಕಲಿಕೆಯಲ್ಲಿ ಗುರು ಪರಂಪರೆ ರೂಪುಗೊಂಡಿಲ್ಲ. ಯಕ್ಷಗಾನದ ರಾಗ, ತಾಳ, ಕುಣಿತಗಳನ್ನು ಸಾಂಪ್ರದಾಯಿಕ ಚೌಕಟ್ಟಿನಲ್ಲಿ ದಾಖಲಿಸಲಾಗಿಲ್ಲ. ಹೀಗೆ ಪ್ರಶ್ನೆಗೊಳಗಾಗದೆ ಕಲಾವಿದ ಯಕ್ಷಗಾನದ ಕೃಷಿಯಲ್ಲಿ ತೊಡಗದೆ ಕೇವಲ ಧನಾರ್ಜನೆಗೆ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದನ್ನು ಕಾಣುತ್ತಿದ್ದೇವೆ. ಯಕ್ಷಗಾನದ ವ್ಯಾಪಕತೆ ಅದು ಕಲೆಯಾಗಿ ಬೆಳೆದಿದೆ ಎಂಬ ಭ್ರಮೆಯನ್ನು ಹುಟ್ಟಿಸುತ್ತಿದೆ. ಜನಪ್ರಿಯವಾಗುವ ಹಾದಿಯಲ್ಲಿ ಯಕ್ಷಗಾನದ ಮೂಲ ಲಕ್ಷಣಗಳು ದುರ್ಬಲವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಜಾಗತಿಕವಾಗಿ ಪ್ರಸಿದ್ಧವಾಗುವುದು ಎಂದರೆ ಮಾರಾಟದ ವ್ಯಾಪಾರಿ ಸರಕಾಗುವುದು ಎಂಬರ್ಥವಲ್ಲ. ಸಂಶೋಧನೆಗಳ ಹೆಸರಿನಲ್ಲಿ ಯಕ್ಷಗಾನದ ಮೂಲ ಆಶಯಕ್ಕೆ ಚ್ಯುತಿ ಬರಬಾರದು. ಶಿವರಾಮ ಕಾರಂತರು ಈ ಹಿನ್ನೆಲೆಯಲ್ಲಿ ಸಂಶೋಧನೆ ನಡೆಸಿ ಚೌಕಟ್ಟು ಕೊಡುವ ಪ್ರಯತ್ನಕ್ಕೆ ಮುಂದಾಗಿದ್ದರು. ಈ ಕುರಿತು ಇನ್ನಷ್ಟು ಪ್ರಯತ್ನಗಳಾಗಬೇಕಿದೆ. ಇದು ಜೀವ ಸಮುದಾಯದ ಕಲೆಯಾಗಿಯೂ, ನೀತಿ ನಿಯಮದ ಆಧಾರದಲ್ಲಿ ಜಾಗತಿಕವಾಗುವ ಕಲೆಯಾಗಬೇಕು ಎಂದು ಆಶಿಸಿದರು.
ವಿಶೇಷ ಉಪನ್ಯಾಸ ನೀಡಿದ ರಂಗಕರ್ಮಿ ಡಾ| ಗುರುರಾವ್ ಬಾಪಟ್, ಒಂದು ಕಲೆ ಶಾಸ್ತ್ರೀಯವಾಗುತ್ತಲೇ ಜನಕ್ಕೆ ಹತ್ತಿರವೂ ಆಗುವುದು ಒಂದು ಸವಾಲು. ಕಥಕ್ಕಳಿಯನ್ನು ಜನಪ್ರಿಯವಾಗಿಸುವ ತರಾತುರಿಯಲ್ಲಿ ಅದರ ಮೂಲ ಸತ್ವವನ್ನು ಗಾಳಿಗೆ ತೂರಿದ್ದು, ಈಗ ಆ ಕಲೆ ಜನರಿಂದ ದೂರವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಬೇಕು ಎಂಬ ನಿರೀಕ್ಷೆಗಳೇ ಕಲೆಗೆ ಧಕ್ಕೆ ಮಾಡುವ ಅಂಶವಾಗಿದ್ದು ಯಕ್ಷಗಾನದ ಮೂಲ ಸತ್ವವೇ ಸತ್ಯವಾಗಿ ಇದನ್ನು ಉಳಿಸುವ ಶಕ್ತಿಯಾಗಬೇಕಿದೆ ಎಂದು ಪ್ರತಿಪಾದಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್, ರಾಜ್ಯ ಪ್ರಶಸ್ತಿ ಪುರಸ್ಕೃತ ಗೋಡೆ ನಾರಾಯಣ ಹೆಗಡೆ ಉಪಸ್ಥಿತರಿದ್ದರು. ಗಣಪತಿ ಶಿರಳಗಿ ಅಧ್ಯಕ್ಷತೆ ವಹಿಸಿದ್ದರು. ಹಿತಕರ ಜೈನ್ ವಂದಿಸಿದರು. ಎಚ್.ಬಿ.ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ಸಂವಾದದಲ್ಲಿ ಡಾ| ಕುಂಸಿ ಉಮೇಶ್, ಎಂ.ಎಲ್. ಭಟ್, ಡಾ| ಪ್ರಭಾಕರ್ ರಾವ್, ಲಕ್ಷ್ಮಿàನಾರಾಯಣ ಹೆಗಡೆ, ಶಶಾಂಕ ಹೆಗಡೆ, ಮಂಜುನಾಥ ಗೊರಮನೆ, ಸರಸ್ವತಿ ನಾಗರಾಜ್, ಅಹಲ್ಯಾ ಶ್ರೀನಿವಾಸ್, ಕೆ.ಎಚ್. ಜಯರಾಂ ಇನ್ನಿತರರು ಪಾಲ್ಗೊಂಡಿದ್ದರು.
ಕೃಪೆ : http://www.kannadaprabha.com
|
|
|